ಸಿದ್ದಾಪುರ : ಸಾರಿಗೆ ನಿಯಮ ಉಲ್ಲಂಘಿಸಿ ಶಾಲಾ ವಿದ್ಯಾರ್ಥಿಗಳಿಗೆ ಅಪಾಯಕರ ರೀತಿಯಲ್ಲಿ ವೈಟ್ ಬೋರ್ಡ್ ವಾಹನದಲ್ಲಿ ಮಕ್ಕಳನ್ನ ಕೂರಿಸಿಕೊಂಡು ಬಾಡಿಗೆ ಓಡಿಸುತ್ತಿರುವುದನ್ನ ತಡೆದು ಮುಂದೆ ಆಗುವ ಹೆಚ್ಚಿನ ಅನಾಹುತ ತಡೆಯಬೇಕು ಎಂದು ಶ್ರೀ ಬೀರಗುಂಡಿ ಭೂತೇಶ್ವರ ಪ್ರವಾಸಿ ವಾಹನ ಚಾಲಕ ಮಾಲಕರ ಸಂಘ ಸಿದ್ದಾಪುರ ಆಗ್ರಹ ಮಾಡಿದೆ.
ವೈಟ್ ಬೋರ್ಡ್ ವಾಹನ ಸ್ವಂತ ಬಳಕೆಗೆ ಬಳಸಬೇಕು ಎನ್ನುವುದು ಸಾರಿಗೆ ನಿಯಮ ಆದರೆ ವಾಹನ ಮಾಲಕರು ಹಣದ ಆಸೆಗೆ ಶಾಲೆಗಳಿಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳನ್ನು ವಾಹನದಲ್ಲಿ ಜಾಗವಿಲ್ಲದಿದ್ದರೂ ಹೆಚ್ಚು ಹೆಚ್ಚು ಮಕ್ಕಳನ್ನ ಕೂರಿಸಿಕೊಂಡು ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸಿದಾಗ ಅನೇಕ ರೀತಿಯಲ್ಲಿ ತೊಂದರೆ ಉಂಟಾಗುತ್ತದೆ, ವಿದ್ಯಾವಂತರಾದ ತಿಳುವಳಿಕೆಯುಳ್ಳ ಶಾಲಾ ಮುಖ್ಯಸ್ಥರು ಜಾಗೃತಿ ಮೂಡಿಸುವ ಬದಲು ಸುಮ್ಮನಿದ್ದಾರೆ ಹಾಗೆ ಪಾಲಕರು ಕೂಡ ಸೂಕ್ಷ್ಮತೆ ಅರಿತುಕೊಂಡು ಜಾಗ್ರತರಾಗಬೇಕು ಎಂದು ಸಂಘದವರು ಮನವಿ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಶಿಕ್ಷಣ ಇಲಾಖೆ, ಸಾರಿಗೆ, ಪೊಲೀಸ್ ಅಧಿಕಾರಿಗಳು ಎಚ್ಛೆತ್ತುಕೊಂಡು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಅಪಾಯಕರ ರೀತಿಯಲ್ಲಿ ವೈಟ್ ಬೋರ್ಡ್ ವಾಹನದ ಮಾಲಕರು ಚಿಕ್ಕ ಚಿಕ್ಕ ಮಕ್ಕಳನ್ನ ಶಾಲೆಗೆ ಬಿಡುವುದ, ಕರೆದುಕೊಂಡು ಹೋಗುವುದು ಮಾಡುತ್ತಿರುವುದು ಕಾನೂನು ಪ್ರಕಾರ ತಪ್ಪು ಅಲ್ಲದೆ ಮಕ್ಕಳಿಗೆ ಸುರಕ್ಷತೆ ಕೂಡ ಇಲ್ಲ, ಹಲವು ಬಾರಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಆದರೆ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದಾರೆ, ವಾಹನಗಳು ಕೂಡ ಅಷ್ಟೊಂದು ಗಟ್ಟಿಮುಟ್ಟಿಲ್ಲ ಇದು ಅಪಾಯಕ್ಕೆ ಅಹ್ವಾನವಾಗುತ್ತದೆ. ಯಾಕೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ತಿಳಿಯುತ್ತಿಲ್ಲ ಸ್ಥಳೀಯ ಶಾಸಕರು ಭೀಮಣ್ಣ ನಾಯ್ಕ್ ರವರು ಗಮನ ಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು.
— ಗಣಪತಿ ನಾಯ್ಕ್ ಹೊಸೂರ ಅಧ್ಯಕ್ಷರು ಬೀರಗುಂಡಿ ಭೂತೇಶ್ವರ ಪ್ರವಾಸಿ ವಾಹನ ಚಾಲಕ ಮಾಲಕರ ಸಂಘ ಸಿದ್ದಾಪುರ.
ಬಾಕ್ಸ್
ಸಾರ್ವಜನಿಕರೇ ಈ ರೀತಿ ಅನುಮತಿ ಇಲ್ಲದೆ ವೈಟ್ ಬೋರ್ಡ್ ನಲ್ಲಿ ಬಾಡಿಗೆ ಓಡಿಸುತ್ತಿರುವದನ್ನ ನೋಡಿ ಹಿಡಿದುಕೊಟ್ಟರು ಅದೇ ವಾಹನಗಳು ಮತ್ತೆ ಮಕ್ಕಳನ್ನು ತುಂಬಿಕೊಂಡು ಓಡಿಸುತ್ತಿದ್ದಾರೆ ಅಂದರೆ ಅಧಿಕಾರಿಗಳಿಗೂ ಮತ್ತು ವಾಹನದ ಮಾಲಕರಿಗೂ ಹೊಂದಾಣಿಕೆ ಇದೆ ಎನ್ನುವುದು ತಿಳಿದು ಬರುತ್ತದೆ. ಕಾನೂನು ಉಲ್ಲಂಘನೆ ಮಾಡಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿದ್ದಾಪುರದಲ್ಲೂ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು ಯಾವ ಕ್ಷಣದಲ್ಲೂ ಅಪಾಯಗಳು ಸಂಭವಿಸಬಹುದು ಇದರಿಂದ ಮುಗ್ಧ ವಿದ್ಯಾರ್ಥಿಗಳು ತೊಂದರೆ ಪಡುವಂತಾಗುತ್ತದೆ, ಹಲವು ವಾಹನಗಳಿಗೆ ದಾಖಲೆಗಳೇ ಇಲ್ಲ, ಸಂಬಂಧಪಟ್ಟ ಇಲಾಖೆಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿ ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.